ಯಕ್ಷಗಾನ ಅಪ್ಪಟ ಸ್ವದೇಶಿ; ನಾಟಕಕ್ಕೆ ಪಾಶ್ಚಾತ್ಯ ಸ್ಪರ್ಶ
ಲೇಖಕರು : ಉದಯವಾಣಿ
ಸೋಮವಾರ, ನವ೦ಬರ್ 17 , 2014
|
ಯಕ್ಷಗಾನ ಸಂಪೂರ್ಣ ಸ್ವದೇಶಿ. ಅಂತೆಯೇ ಯಕ್ಷಗಾನದ ಪಾತ್ರಗಳು ಕೂಡ ಅಪ್ಪಟ ಸ್ವದೇಶಿ. ಆದರೆ ರಂಗಭೂಮಿಯಲ್ಲಿ ಪಾಶ್ಚಾತ್ಯ ಸ್ಪರ್ಶ, ಪ್ರಭಾವ ಇದೆ ಎಂದು ಹಿರಿಯ ಕಲಾವಿದ, ಪ್ರಸಾಧನ ತಜ್ಞ ಪುರುಷೋತ್ತಮ ತಳ್ವಾಟ ಹೇಳಿದರು.
ಅವರು ನ.16ರಂದು ಯಕ್ಷಗಾನ ಕಲಾರಂಗವು ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಕಾಣಿಯೂರು ಮಠ, ಯಕ್ಷಗಾನ ಅಕಾಡೆಮಿ ಹಾಗೂ ಉಡುಪಿ ಪ್ರಸ್ ಫೋಟೋಗ್ರಾಫರ್ ಅಸೋಸಿಯೇಷನ್ (ಉಪ್ಪಾ) ಸಹಯೋಗದಲ್ಲಿ ರಾಜಾಂಗಣದಲ್ಲಿ ಆಯೋಜಿಸಿದ್ದ ಯಕ್ಷಗಾನದ ದೈತ್ಯಪ್ರತಿಭೆ ಬಣ್ಣದ ಮಾಲಿಂಗ ಶತಮಾನ ಸ್ಮರಣಾರ್ಥ ಬಣ್ಣದ ಬಿನ್ನಾಣ-ತೆಂಕುತಿಟ್ಟಿನ ಬಣ್ಣದ ವೇಷಧಾರಿಗಳ ಸಮ್ಮಿಲನದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಮತ್ತು ನಾಟಕಗಳೆರಡರಲ್ಲೂ ಪ್ರಸಾಧನ (ಬಣ್ಣಗಾರಿಕೆ) ಅತ್ಯಂತ ಮಹತ್ವದ್ದು. ಆದರೆ ಯಕ್ಷಗಾನದ ಬಣ್ಣ ಪಾರಂಪರಿಕವಾದುದು ಎಂದರು. ನಾಟಕದ ಪಾತ್ರಧಾರಿಗಳಿಗೆ ಬಣ್ಣ ಹಚ್ಚಲು ಮೇಕಪ್ಮ್ಯಾನ್ಗಳಿದ್ದರೆ ಯಕ್ಷಗಾನದ ಪ್ರತಿಯೊಬ್ಬ ಪಾತ್ರಧಾರಿ ಕೂಡ ಮೇಕಪ್ ಆರ್ಟಿಸ್ಟ್ ಆಗಿರುತ್ತಾನೆ. ನಾಟಕದಲ್ಲಿ ಕೃಷ್ಣ, ಅರ್ಜುನ, ಬಭುÅವಾಹನರಂತಹ ಪಾತ್ರವನ್ನು ನೋಡಿದಾಗ ಅದು ಪಾಶ್ಚಾತ್ಯರಂತೆ ತೋರುತ್ತದೆ. ಆದರೆ ಅದನ್ನು ಯಕ್ಷಗಾನದಲ್ಲಿ ನೋಡಿದಾಗ ಅದು ನಮ್ಮದೇ ಕೃಷ್ಣ, ಅರ್ಜುನ, ಬಭುÅವಾಹನರಂತೆ ಕಾಣುತ್ತದೆ. ಇದು ಕೂಡ ನಾಟಕ ಮತ್ತು ಯಕ್ಷಗಾನದ ಬಣ್ಣಗಾರಿಕೆಯಲ್ಲಿನ ಒಂದು ವ್ಯತ್ಯಾಸ ಎಂದು ಅವರು ಹೇಳಿದರು.
ಉದ್ಘಾಟನೆ ನೆರವೇರಿಸಿದ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಅವರು ಮಾತನಾಡಿ, 'ಬಣ್ಣಗಾರಿಕೆ ಸುಲಭದ ಕೆಲಸವಲ್ಲ. ಅದೊಂದು ನೈಪುಣ್ಯ, ಶ್ರದ್ಧೆಯ ಕೆಲಸ. ಬಣ್ಣಗಾರಿಕೆಯವರ ಕಾರ್ಯನಿಷ್ಠೆ ಶ್ಲಾಘನೀಯ' ಎಂದರು.
ಮುಖ್ಯ ಅತಿಥಿಯಾಗಿ ಯಕ್ಷಗಾನ ಅಕಾಡೆಮಿ ಸದಸ್ಯ ಪಿ.ಕಿಶನ್ ಹೆಗ್ಡೆ ಮಾತನಾಡಿ, 'ಪಾರಂಪರಿಕ ಬಣ್ಣಗಾರಿಕೆಯನ್ನು ಇಂದಿಗೂ ಅನೇಕ ಯಕ್ಷಗಾನ ಕಲಾವಿದರು ಉಳಿಸಿಕೊಂಡು ಬಂದಿದ್ದಾರೆ. ಇದು ಮುಂದಿನ ಜನಾಂಗಕ್ಕೂ ಪರಭಾರೆಯಾಗಬೇಕು. ಶಾಶ್ವತವಾಗಿ ಉಳಿಯಬೇಕು' ಎಂದು ಹೇಳಿದರು.
ಮಠದ ದಿವಾನ ರಘುಪತಿ ಆಚಾರ್ಯ, ಬಣ್ಣದ ಮಾಲಿಂಗ ಅವರ ಪುತ್ರ ಸುಬ್ರಾಯ ಸಂಪಾಜೆ ಉಪಸ್ಥಿತರಿದ್ದರು. ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು. ಎಸ್.ವಿ. ಭಟ್ ವಂದಿಸಿದರು. ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, 'ಉಪ್ಪಾ' ಅಧ್ಯಕ್ಷ ಆಸ್ಟ್ರೋಮೋಹನ್ ಮತ್ತಿತರರು ಉಪಸ್ಥಿತರಿದ್ದರು. ಯುವ ಛಾಯಾಚಿತ್ರಗ್ರಾಹಕರಿಗೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾವಣ, ಸಿಂಹ, ಶೂರಪದ್ಮ...
'ಬಣ್ಣದ ಬಿನ್ನಾಣ'ವು ಯಕ್ಷಗಾನದ ಬಣ್ಣಗಾರಿಕೆ, ಮುಖವರ್ಣಿಕೆಯ ವೈಭವವನ್ನು ಅನಾವರಣಗೊಳಿಸಿತು. ನೋಡುಗರನ್ನು ನಿಬ್ಬೆರಗಾಗಿಸಿತು. ಸಾಂಪ್ರದಾಯಿಕ, ಪಾರಂಪರಿಕ ಬಣ್ಣಗಾರಿಕೆಯಲ್ಲಿ ತೊಡಗಿಕೊಂಡ ಕಲಾವಿದರ ಕೈಚಳಕ ರೋಮಾಂಚನವನ್ನುಂಟು ಮಾಡುವಂತಿತ್ತು. ರಾವಣ, ಯಮ, ಶೂರಪದ್ಮ, ಶುಂಭಾಸುರ, ಸೈಂಧವ ಸೇರಿದಂತೆ ವಿವಿಧ ಪಾತ್ರಗಳ ಅದ್ಭುತ ಬಣ್ಣಗಾರಿಕೆ ಮೇಳೈಸಿತು. ಮಾತ್ರವಲ್ಲದೆ ಸರ್ಪ, ಸಿಂಹ, ಗರುಡ ಮೊದಲಾದ ಪಾತ್ರಗಳ ಮುಖವರ್ಣಿಕೆಯೂ ಆಕರ್ಷಿಸಿತು. ಚೌಕಿಯೊಳಗೆ ನಡೆಯುವ ಶ್ರದ್ಧೆ, ತಾಳ್ಮೆ, ನೈಪುಣ್ಯತೆಯ ಕೆಲಸದ ಸೊಬಗು ರಾಜಾಂಗಣದಲ್ಲಿ ನೂರಾರು ಮಂದಿಯ ಸಮ್ಮುಖ ಅನಾವರಣಗೊಂಡಿತು.
**********************
ಚಿತ್ರ ಕೃಪೆ : ಅ೦ತರ್ಜಾಲದ ಯಕ್ಷಗಾನಾಭಿಮಾನಿಗಳು
ಕೃಪೆ :
http://www.udayavani.com
|
|
|